ಡಾ.ಅಂಬೇಡ್ಕರ್ ಫೋಟೋ ಬಳಸಿ ಓಟಿನ ಶ್ರೇಷ್ಟತೆ ಹೇಳಿದ ಬ್ಯಾನರ್ - Mahanayaka

ಡಾ.ಅಂಬೇಡ್ಕರ್ ಫೋಟೋ ಬಳಸಿ ಓಟಿನ ಶ್ರೇಷ್ಟತೆ ಹೇಳಿದ ಬ್ಯಾನರ್

13/12/2020

ಮಂಡ್ಯ: ಗ್ರಾಮ ಪಂಚಾಯತ್ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಹಳ್ಳಿಗಳಲ್ಲಿ ಜಾತ್ರೆಯ ವಾತಾವರಣ ಸೃಷ್ಟಿಯಾಗಿದೆ. ಪಕ್ಷ ರಹಿತವಾಗಿ ಈ ಚುನಾವಣೆ ನಡೆಯುವುದಾದರೂ, ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳೇ ಕಣಕ್ಕಿಳಿಯುತ್ತಿದ್ದಾರೆ.  ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಚುನಾವಣೆಯ ಬಗ್ಗೆ ಜನರೇ ಮುಂದೆ ನಿಂತು ಜಾಗೃತಿ ಮೂಡಿಸುತ್ತಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಪಕ್ಷಗಳು ರಾಜಕಾರಣಗಳು ಹಣದ ಆಮಿಷ ಒಡ್ಡುವುದು, ಮದ್ಯ ಮೊದಲಾದ ಪದಾರ್ಥಗಳನ್ನ ನೀಡಿ ಓಟು ಹಾಕಿಸಿಕೊಳ್ಳುವುದು ಮೊದಲಾದ ಕೃತ್ಯಗಳು ಸರ್ವೇ ಸಾಮಾನ್ಯವಾಗಿದೆ. ಇಂತಹ ಸಂದರ್ಭದಲ್ಲಿ ದೇಶದ ಜನರಿಗೆ ಮತದಾನದ ಹಕ್ಕನ್ನು ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿತ್ರ ಬಳಸಿ ಮತದಾನದ ಮಹತ್ವವನ್ನು  ಜನರಿಗೆ ಮನವರಿಕೆ ಮಾಡುವ ಕೆಲಸಗಳು ಇದೀಗ ಆರಂಭವಾಗಿದೆ. ಇದೇ ಕೆಲಸ ಹಳ್ಳಿ ಹಳ್ಳಿಗಳನ್ನು ನಡೆಯುವ ಸಾಧ್ಯತೆಗಳು ಕಂಡು ಬಂದಿವೆ.

ಮಂಡ್ಯ ತಾಲೂಕಿನ ದೊಡ್ಡಗರುಡನಹಳ್ಳಿಯಲ್ಲಿ ಓಟಿನ ಮಹತ್ವವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಬ್ಯಾನರ್ ವೊಂದನ್ನು ಹಾಕಲಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗಿದೆ. ಮತದಾನದ ಅರಿವು ಮೂಡಿಸಲು ಅಂಬೇಡ್ಕರ್ ವಾದಿಗಳು ಮುಂದೆ ಬಂದಿದ್ದಾರೆ. ಅಂಬೇಡ್ಕರ್ ಅವರ ಚಿತ್ರ ಬಳಸಿದ ಬ್ಯಾನರ್ ಗಳನ್ನು ಹಾಕುವ ಮೂಲಕ ಮತದಾನದ ಅರಿವು ಮೂಡಿಸಲಾಗುತ್ತಿದೆ.

ಬ್ಯಾನರ್ ನಲ್ಲಿ “ಓಟು ಎಂಬುವುದು ನಮ್ಮ ಮನೆಯ ಅಕ್ಕ, ತಂಗಿ, ತಾಯಿ, ಮಡದಿಯ ಮಾನ ಇದ್ದಂತೆ ಆದ್ದರಿಂದ ನಿಮ್ಮ ಓಟನ್ನು ಹೆಂಡ ಪುಡಿಗಾಸಿಗೆ ಮಾರಿಕೊಳ್ಳಬೇಡಿ, ಯೋಚಿಸಿ ಮತ ನೀಡಿ” ಎಂದು ಬ್ಯಾನರ್ ನಲ್ಲಿ ಬರೆಯಲಾಗಿದೆ.

ಗ್ರಾಮಪಂಚಾಯತ್ ಚುನಾವಣೆಯ ನಡುವೆ ಈ ಬ್ಯಾನರ್ ನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರ ಗಮನ ಸೆಳೆದಿದೆ. ಪ್ರತಿ ಹಳ್ಳಿಗಳಲ್ಲೂ ಓಟಿನ ಶ್ರೇಷ್ಠತೆ, ಪವಿತ್ರತೆಯನ್ನು ಮೂಡಿಸುವ ಕೆಲಸ ಆಗಬೇಕಿದೆ. ಈ ಕೆಲಸ ಸರ್ಕಾರವೇ ಮಾಡಬೇಕಿತ್ತು, ಆದರೆ ಅವರಿಂದ ಸಾಧ್ಯವಾಗುತ್ತಿಲ್ಲವೆಂದಾದರೆ, ಅಂಬೇಡ್ಕರ್ ವಾದಿಗಳು ಮುಂದೆ ನಿಂತು ಓಟಿನ ಶ್ರೇಷ್ಟತೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು ಎನ್ನುವ ಅಭಿಪ್ರಾಯಗಳು ಸದ್ಯ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ