ಅಂಬೇಡ್ಕರ್ ಪರಿನಿಬ್ಬಾಣ ದಿನದಂದು ಮಹಿಳೆಯ ಮನೆ ನಿರ್ಮಾಣಕ್ಕೆ ಚಾಲನೆ ನೀಡಿದ ರಾಜಕೇಸರಿ ಸಂಘಟನೆ
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಮೇಲಂತಬೆಟ್ಟು ಗ್ರಾಮದ ದಿವಂಗತ ನಾರಾಯಣ ನಾಯ್ಕರ ಪತ್ನಿ ಶಾಂತಾ ಅವರು ವಾಸಿಸಲು ಸೂಕ್ತ ಮನೆಯಿಲ್ಲದೇ ಸಂಕಷ್ಟದಲ್ಲಿದ್ದರು. ಇವರ ಸಂಕಷ್ಟ ಕಳೆಯಲು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿಬ್ಬಾಣದ ಸಂದರ್ಭದಲ್ಲಿ ರಾಜಕೇಸರಿ ಸಂಘಟನೆ ಮುಂದಾಗಿದ್ದು, ನೊಂದ ಮಹಿಳೆಯ ಕಣ್ಣೀರು ಒರೆಸುವ ಮಹಾ ಕಾರ್ಯದಲ್ಲಿ ಈ ಸಂಘಟನೆ ತೊಡಗಿದೆ.
ರಾಜಕೇಸರಿ ಬಳಗವು ಈವರೆಗೆ 34 ಗೃಹ ನಿರ್ಮಾಣ ಕಾರ್ಯವನ್ನು ಮಾಡಿದೆ. ಗ್ರಾಮ ಪಂಚಾಯತ್ ಅನುದಾನದ ನೆರವಿನೊಂದಿಗೆ ಮಹಿಳೆಯ ಮನೆ ನಿರ್ಮಾಣಕ್ಕೆ ಮುಂದಾಗುವ ಸಂಘಟನೆಯು, ಶ್ರಮದಾನ ಮಾಡುವ ಮೂಲಕ ಮಹಿಳೆ ಉತ್ತಮ ಮನೆ ನಿರ್ಮಾಣ ಮಾಡಲು ಸಹಕಾರ ಮಾಡುತ್ತಿದ್ದಾರೆ.
ಡಿಸೆಂಬರ್ 6ರಂದು ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನದಂದು, ಸಂಘಟನೆಯು ಮಹಿಳೆಯ ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದು, ಮನೆ ಒಡತಿ ಶಾಂತಾ ಅವರ ಕೈಯಿಂದಲೇ ಮನೆಗೆ ಮೊದಲ ಕಲ್ಲನ್ನು ಇರಿಸುವ ಮೂಲಕ ಭೂಮಿ ಪೂಜೆ ನೆರವೇರಿಸಿದ್ದಾರೆ.
ರಾಜಕೇಸರಿ ಸಂಘಟನೆಯನ್ನು ದೀಪಕ್ ಜಿ. ಅವರು ಸ್ಥಾಪಿಸಿದ್ದು, ಈಗಾಗಲೇ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ಸಂಘಟನೆ ತೊಡಗಿದೆ. ಶ್ರಮಾದಾನದಲ್ಲಿ ತಾಲೂಕು ಅಧ್ಯಕ್ಷ ಕಾರ್ತಿಕ್, ಕೋಶಾಧಿಕಾರಿ ಸಂತೋಷ್, ತಾ.ಸಂಚಾಲಕ ಪ್ರವೀಣ್ ಕುಲಾಲ್ , ಸಾಮಾಜಿಕ ಜಾಲತಾಣ ವಿಭಾಗದ ವಿನೋದ್ ಪೂಜಾರಿ, ತಾಲೂಕು ಮಾನವ ಸ್ಪಂದನ ತಂಡದ ಮುಖ್ಯಸ್ಥ ಪಿ.ಸಿ ಸೆಬಾಸ್ಟಿಯನ್ ಮುಂಡಾಜೆ, ತಾ. ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ, ರಾಜಕೇಸರಿ ಕಾರ್ಯಕರ್ತರಾದ ರಾಜೇಶ್, ಸಂತೋಷ್, ಸಂದೇಶ್, ನಾಗೇಶ್ ಬಿ, ಸುಮಂತ್, ಉಮೇಶ್, ಮೊದಲಾದವರು ಭಾಗಿಯಾಗಿದ್ದರು.
ರಾಜಕೇಸರಿ ಸಂಸ್ಥಾಪಕ ದೀಪಕ್ ಜಿ. ಅವರ ನೇತೃತ್ವದಲ್ಲಿ ನಡೆಯುತ್ತಿರುವ ಗ್ರಾಮದ ಬೀಟ್ ಪೊಲೀಸ್ ಸುನೀತಾ ಪಾಲ್ಗೊಂಡರು. ಶಿಲಾನ್ಯಾಸಕ್ಕೆ ಪಂಚಲೋಹಗಳನ್ನು ಶುಭ ಜ್ಯುವೆಲ್ಲರಿಯ ಶುಭಾಶ್, ಮನೆಯ ನೀಲಿ ನಕಾಶೆಯನ್ನು ಇಂಜಿನಿಯರ್ ಶೈಲೇಶ್ ಅವರು ರಚಿಸಿಕೊಟ್ಟು ಕೈಜೋಡಿಸಿದರು.
Disclaimer:
www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.