ಜಂಗಮ ಕಾಯಕ ಯೋಗಿಗೆ ನಾಯಕತ್ವದ ಸ್ಥಾವರ - Mahanayaka

ಜಂಗಮ ಕಾಯಕ ಯೋಗಿಗೆ ನಾಯಕತ್ವದ ಸ್ಥಾವರ

basavanna
22/01/2024

ಅಧಿಕಾರ ರಾಜಕಾರಣದಲ್ಲಿ ಎಲ್ಲವೂ ಬಳಕೆಯ ಮಾದರಿಗಳಾಗಿ ಪರ್ಯವಸಾನ ಹೊಂದುತ್ತವೆ


Provided by
  • ನಾ ದಿವಾಕರ

ಭಾರತದ ರಾಜಕಾರಣಕ್ಕೆ ಒಂದು ಹೊಸ ಕಾಯಕಲ್ಪ ಬೇಕಿದೆ. ಇನ್ನು ಕೆಲವೇ ದಿನಗಳಲ್ಲಿ ಇಡೀ ದೇಶವು ಗಣತಂತ್ರ ದಿನವನ್ನು ಆಚರಿಸುವ ಮೂಲಕ ಭಾರತದ ಸಂವಿಧಾನದ ಸುತ್ತ ವ್ಯಾಪಕ ಚರ್ಚೆಗಳನ್ನು ಹುಟ್ಟುಹಾಕುತ್ತದೆ. “ವಿಕಸಿತ ಭಾರತ ” ಘೋಷಣೆಯೊಡನೆ ದೇಶವು 75ನೆಯ ಗಣತಂತ್ರ ದಿನವನ್ನು ಅಚರಿಸಲಿದೆ. ಈ ನಡುವೆ ಅಯೋಧ್ಯೆಯ ರಾಮಮಂದಿರದ ಉನ್ಮಾದ ಇಡೀ ರಾಜಕೀಯ-ಸಾಂಸ್ಕೃತಿಕ ವಲಯವನ್ನು ಆವರಿಸಿದ್ದು, ಗಾಂಧಿ ಕಂಡ ರಾಮರಾಜ್ಯದ ಕನಸನ್ನು ನನಸಾಗಿಸುವ ರಾಜಕೀಯ ಭಾವಾವೇಶದ ಮಾತುಗಳು ಜನಸಾಮಾನ್ಯರನ್ನು ಮತ್ತಷ್ಟು ಭ್ರಮಾಧೀನಗೊಳಿಸುವ ಸಾಧ್ಯತೆಗಳಿವೆ. ಈ ನಡುವೆಯೇ ಕರ್ನಾಟಕದ ಕಾಂಗ್ರೆಸ್‌ ಸರ್ಕಾರಕ್ಕೆ 12ನೆ ಶತಮಾನದ ಕಾಯಕ ಯೋಗಿ-ಜಂಗಮ ಪರಿಚಾರಕ ಬಸವಣ್ಣ ಸಾಂಸ್ಕೃತಿಕ ನಾಯಕನಾಗಿ ಕಂಡುಬಂದಿದ್ದಾರೆ. ರಾಜ್ಯ ಸರ್ಕಾರ ಅಧಿಕೃತವಾಗಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ.

ಇಲ್ಲಿ ಹಲವು ಪ್ರಶ್ನೆಗಳು ಎದುರಾಗುತ್ತವೆ. ಎಂಟು ಶತಮಾನಗಳ ಹಿಂದೆಯೇ ತನ್ನ ವಚನಗಳ ಮೂಲಕ ಸಮ ಸಮಾಜ, ಸಮನ್ವಯದ ಬದುಕು ಹಾಗೂ ಮಾನವೀಯ ಮೌಲ್ಯಗಳ ಸುತ್ತ ಒಂದು ತಾತ್ವಿಕ ಒಳನೋಟಗಳನ್ನು ಕಟ್ಟಿಕೊಟ್ಟ ಬಸವಣ್ಣ ಒಂದು ಭೌಗೋಳಿಕ ಪ್ರದೇಶಕ್ಕೆ ಸೀಮಿತವೇ ? ಈವರೆಗೆ ಸಮಕಾಲೀನ ಸಮಾಜವು ಬಸವ ತತ್ವಗಳನ್ನು ಯಾವುದೇ ಒಂದು ವಲಯದಲ್ಲಾದರೂ ಅಳವಡಿಸಿ, ಅನುಸರಿಸುವಲ್ಲಿ ಸಫಲವಾಗಿದೆಯೇ ? “ಎನ್ನ ಕಾಲೇ ಕಂಬ ದೇಹವೇ ದೇಗುಲ,,, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ,,” ಎಂಬ ಮಾನವ ಸಮಾಜಕ್ಕೆ ಸಾಂಸ್ಕೃತಿಕ ಮುಕ್ತಿ ನೀಡಿದ ಬಸವಣ್ಣ ಇಂದು ನಿಜಕ್ಕೂ ಜಂಗಮ ರೂಪದಲ್ಲಿ ಉಳಿದಿದ್ದಾರೆಯೇ ? ನಿರ್ದಿಷ್ಟ ಜಾತಿ ಅಥವಾ ಧರ್ಮದ ಕಟ್ಟುಪಾಡುಗಳಿಗೆ ಸಿಲುಕಿ ಮಠ-ಮಂದಿರ-ದೇವಾಲಯಗಳಲ್ಲಿ ಬಂದಿಯಾಗಿರುವ ಬಸವ ತತ್ವ ಹಾಗೂ ವಚನಗಳು ಅನುಯಾಯಿಗಳನ್ನಾದರೂ ನಿರ್ದೇಶಿಸುತ್ತಿವೆಯೇ ?

ಸಂಸ್ಕೃತಿಯ ರಾಜಕೀಯ ಆಯಾಮ:

ರಾಮಮಂದಿರದ ಮೂಲಕ ಇಡೀ ಭರತಖಂಡದ ಪುನರುತ್ಥಾನದ ಭ್ರಮಾತ್ಮಕ ಕನಸು ಕಾಣುತ್ತಿರುವ ಅಧಿಕಾರ ರಾಜಕಾರಣದಲ್ಲಿ ಬಸವಣ್ಣನವರ ವಚನ :
“ ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯ ಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ,
ಇದೇ ಅಂತರಂಗಶುದ್ಧಿ ,ಇದೇ ಬಹಿರಂಗಶುದ್ಧಿ”
ಎಂಬ ಹಿತನುಡಿಗಳಿಗೆ ನಮ್ಮ ವರ್ತಮಾನದ ಸಮಾಜ ಮತ್ತು ರಾಜಕಾರಣ ಕಿವಿಗೊಟ್ಟಿದೆಯೇ ? ರಾಜಕೀಯ ಅಧಿಕಾರವು ಸೃಷ್ಟಿಸಿರುವ ಭ್ರಷ್ಟಾಚಾರದ ಒಂದು ಜಗತ್ತಿನಲ್ಲಿ ಸುಳ್ಳು ಸತ್ಯಗಳ ನಡುವಿನ ವ್ಯತ್ಯಾಸವೇ ಮಸುಕಾಗಿ ಹೋಗಿದೆ. ವಿರೋಧಿಗಳನ್ನು ರಾಜಕೀಯವಾಗಿ ಇಲ್ಲವಾಗಿಸುವುದು ಸಹಜ ಪ್ರವೃತ್ತಿಯಾಗಿದ್ದರೆ, ಪ್ರತಿರೋಧದ ಬಗ್ಗೆ ಅಸಹನೆ, ಆಕ್ರೋಶ ಸಾಂವಿಧಾನಿಕ ಸಂಸ್ಥೆಗಳ ಮೂಲಕ ವ್ಯಕ್ತವಾಗುತ್ತಿದೆ. ರಾಜಕೀಯ ಭಾಷಣಗಳಲ್ಲಿ ಕಾಣಲಾಗುತ್ತಿರುವ ಆಕ್ರೋಶ-ಅಸಹನೆ, ಸಾಂಸ್ಕೃತಿಕವಾಗಿಯೂ ಸಮಾಜದಲ್ಲಿ ʼ ಅನ್ಯರನ್ನು ʼ ಸೃಷ್ಟಿಸುತ್ತಲೇ ಇದೆ. ʼ ಅನ್ಯರಿಗೆ ಅಸಹ್ಯ ಪಡಬೇಡ ʼ ಎಂಬ ಬಸವಣ್ಣನವರ ವಚನದ ಸಾಲುಗಳು ಸಮಕಾಲೀನ ರಾಜಕಾರಣದಲ್ಲಿ ಅಪ್ರಸ್ತುತವಾಗಿದೆ. ಏಕೆಂದರೆ ಈ ʼಅನ್ಯʼ ಇಲ್ಲದೆ ಹಿಂದುತ್ವದ ಸಾಂಸ್ಕೃತಿಕ ರಾಜಕಾರಣಕ್ಕೆ ಅಸ್ತಿತ್ವವೇ ಇರುವುದಿಲ್ಲ. ಅನ್ಯ ಮತ, ಅನ್ಯ ಜಾತಿ, ಅನ್ಯ ಧರ್ಮ, ಅನ್ಯ ಭಾಷೆ ಹೀಗೆ ಮನುಷ್ಯ ಸಮಾಜದ ಪ್ರತಿಯೊಂದು ಸ್ತರದಲ್ಲೂ ʼಅನ್ಯʼ ರನ್ನು ಸೃಷ್ಟಿಸುತ್ತಾ, ದ್ವೇಷ ರಾಜಕಾರಣವನ್ನು ಬೇರುಮಟ್ಟಕ್ಕೂ ಹರಡುತ್ತಿರುವ ಹೊತ್ತಿನಲ್ಲಿ, ʼತನ್ನ ಬಣ್ಣಿಸುವʼ ಅಥವಾ ʼಇದಿರ ಹಳಿಯುವʼ ಆತ್ಮರತಿಯ ಮನೋಭಾವ ಇಡೀ ರಾಜಕೀಯ ವಲಯವನ್ನು ಆಕ್ರಮಿಸಿದೆ.

ಬಸವಣ್ಣನವರ ಈ ಒಂದು ವಚನ ನಮ್ಮ ಸಂವಿಧಾನವನ್ನೂ ನಿರ್ದೇಶಿಸಿದೆ ಎನ್ನುವುದು ವಾಸ್ತವ. 12ಯ ಶತಮಾನದ ಈ ಕಾಯಕ ಯೋಗಿಯನ್ನು ಸಾಂಸ್ಕೃತಿಕ ನಾಯಕನನ್ನಾಗಿ ಸಂಸ್ಥಾಪಿಸುವ ರಾಜ್ಯ ಸರ್ಕಾರದ ನಿರ್ಧಾರ ಸ್ವೀಕಾರಾರ್ಹವೇ ಸರಿ. ಆದರೆ ಕೇವಲ ಅಧಿಕೃತ ಘೋಷಣೆಗೂ, ತಾತ್ವಿಕ ಅನುಸರಣೆಗೂ ನಡುವೆ ಇರುವ ಅಪಾರ ಅಂತರವನ್ನು ಕಡಿಮೆ ಮಾಡುವ ಪ್ರಯತ್ನಗಳಾದರೂ ನಡೆಯುತ್ತವೆಯೇ ? ಜಾತಿ-ಮತದ ಭಿನ್ನ ಭೇದಗಳನ್ನು ಮರೆತು ಇಡೀ ಮನುಕುಲವನ್ನು ಒಂದು ಕುಟುಂಬದಂತೆ ಕಾಣಲು ನಿರ್ದೇಶಿಸುವ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಂಡ ಸರ್ಕಾರ, ಆಡಳಿತ ವ್ಯವಸ್ಥೆಯಲ್ಲಿನ ಕಳ್ಳತನ, ಭ್ರಷ್ಟಾಚಾರ, ಸುಳ್ಳು, ವಂಚನೆ, ಅಸಹನೆ, ದ್ವೇಷ ಹಾಗೂ ಅಧಿಕಾರ ಲಾಲಸೆಯನ್ನು ಕೊನೆಗೊಳಿಸುವಂತೆ ಪ್ರಮಾಣೀಕರಿಸಲು ಸಾಧ್ಯವೇ ?

ಸ್ಥಾವರಗಳಲ್ಲಿ ದಾರ್ಶನಿಕರು:

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇಬ್ಬರು ದಾರ್ಶನಿಕರನ್ನು ಹೀಗೆಯೇ ಸ್ಥಾಪಿಸಿದ್ದೇವೆ. ದ್ವೇಷ ರಾಜಕಾರಣದ ಪ್ರಥಮ ಬಲಿಪಶುವಾದ ಮಹಾತ್ಮಾ ಗಾಂಧಿಯನ್ನು ʼರಾಷ್ಟ್ರಪಿತʼ ಎಂದು ಗೌರವಿಸಿದ್ದೇವೆ. ಆದರೆ ಇಂದು ಗಾಂಧಿಗೆ ಸಮಾನಾಂತರವಾಗಿ ಗಾಂಧಿ ಹಂತಕ ಗೋಡ್ಸೆಯನ್ನೂ ಸಮ್ಮಾನಿಸಲಾಗುತ್ತಿದೆ. ಆತನ ಪ್ರತಿಮೆಗಳೂ ಪೂಜಿಸಲ್ಪಡುತ್ತಿವೆ. ಗಾಂಧಿ ಬಯಸಿದ ಶಾಂತಿ, ಸಹನೆ ಹಾಗೂ ನಿಸ್ಪೃಹ ಪ್ರಾಮಾಣಿಕತೆಯ ಲವಲೇಶವೂ ಇಲ್ಲದಂತಹ ಒಂದು ಸಮಾಜವನ್ನು ಈ ದೇಶದ ಅಧಿಕಾರ ರಾಜಕಾರಣ ನಿರ್ದೇಶಿಸುತ್ತಿದೆ. ಕಣ್ಣೆದುರು ನಡೆಯುವ ಅತ್ಯಾಚಾರ, ಸಾಮೂಹಿಕ ಹತ್ಯೆ, ದೌರ್ಜನ್ಯಗಳಿಗೂ ಕುರುಡಾಗಿರುವ ಆಳ್ವಿಕೆಯನ್ನು ಹೆಗಲಿಗೇರಿಸಿಕೊಂಡೇ 75ನೆಯ ಗಣತಂತ್ರ ದಿನವನ್ನು ಆಚರಿಸಲಾಗುತ್ತಿದೆ. ಬಸವಣ್ಣ ತಮ್ಮ ವಚನದಲ್ಲಿ ಉಲ್ಲೇಖಿಸುವ ʼಅನ್ಯರುʼ ಇಂದು ಅಸ್ಮಿತೆಗಳ ಆಧಾರದಲ್ಲಿ ಸೃಷ್ಟಿಸಲ್ಪಡುತ್ತಿದ್ದಾರೆ. ʼ ಅನ್ಯ ʼ ದ್ವೇಷ ಇಡೀ ರಾಜಕಾರಣವನ್ನು ನಿರ್ದೇಶಿಸುತ್ತಿದೆ.

ಭಾರತ ಒಪ್ಪಿಕೊಂಡ ಮತ್ತೋರ್ವ ದಾರ್ಶನಿಕ ಡಾ. ಬಿ.ಆರ್.‌ ಅಂಬೇಡ್ಕರ್‌ ಅವರನ್ನು “ಸಂವಿಧಾನಶಿಲ್ಪಿ” ಎಂದು ಅಧಿಕೃತವಾಗಿ ಸ್ಥಾಪಿಸಿಕೊಂಡಿದ್ದೇವೆ. ಅಂಬೇಡ್ಕರ್‌ ಬಯಸಿದ ಸಮ ಸಮಾಜದ, ಸಮನ್ವಯ ಭಾರತದ, ಭ್ರಾತೃತ್ವದ ಹಾಗೂ ನೈತಿಕ ಆಳ್ವಿಕೆಯ ಎಲ್ಲ ಕನಸುಗಳನ್ನೂ ಮಣ್ಣುಗೂಡಿಸುವ ರೀತಿಯಲ್ಲಿ ದೇಶದ ರಾಜಕಾರಣ ಮುನ್ನಡೆಯುತ್ತಿದೆ. ಒಂದೆಡೆ ಬಹುಸಂಖ್ಯಾವಾದದ ರಾಜಕಾರಣ ಅಲ್ಪಸಂಖ್ಯಾತರನ್ನು ಅಂಚಿಗೆ ದೂಡುತ್ತಿದೆ ಮತ್ತೊಂದೆಡೆ ಮರುಸ್ಥಾಪನೆಯಾಗಿರುವ ಜಾತಿ ಶ್ರೇಷ್ಠತೆಯ ನೆಲೆಗಳು ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರ, ಜಾತಿ ಸೂಚಕ ಅಪಮಾನಗಳನ್ನು ವ್ಯವಸ್ಥಿತವಾಗಿ ನಿರ್ದೇಶಿಸುತ್ತಿವೆ. ಅಂಬೇಡ್ಕರ್‌ ಬಲವಾಗಿ ವಿರೋಧಿಸಿದ ಪಿತೃಪ್ರಧಾನತೆ ರಾಜಕಾರಣವನ್ನೂ ಸೇರಿದಂತೆ ಎಲ್ಲ ವಲಯಗಳನ್ನೂ ಆವರಿಸಿದ್ದು, ಬೆತ್ತಲೆ ಮೆರವಣಿಗೆಯಂತಹ ಹೀನಕೃತ್ಯಗಳಿಗೂ ಕುರುಡಾಗುವ ಆಡಳಿತ ವ್ಯವಸ್ಥೆಯಲ್ಲಿ ನಾವಿದ್ದೇವೆ. ರಾಜಕೀಯವಾಗಿ-ಸಾಂಸ್ಕೃತಿಕವಾಗಿ ಈಗಾಗಲೇ ಗುರುತಿಸಲ್ಪಟ್ಟಿರುವ ʼಅನ್ಯʼರೊಂದಿಗೆ ಬೌದ್ಧಿಕವಾಗಿಯೂ ʼಅನ್ಯʼರನ್ನು ಸೃಷ್ಟಿಸಲಾಗುತ್ತಿದೆ. ವಿಶಾಲಾರ್ಥದಲ್ಲಿ ಅಂಬೇಡ್ಕರ್‌ ಬಯಸಿದ ʼಭ್ರಾತೃತ್ವʼ ಮೂಲತಃ ಈ ʼಅನ್ಯʼ ಪರಿಕಲ್ಪನೆಯಿಂದ ಮುಕ್ತವಾಗಬೇಕಿದೆ. ಆದರೆ ವರ್ತಮಾನದ ಭಾರತ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ.

ಸಾಂಸ್ಕೃತಿಕ ನಾಯಕತ್ವದ ಕಲ್ಪನೆ:

ಈ ವೈರುಧ್ಯಗಳ ನಡುವೆಯೇ ಕರ್ನಾಟಕ ಸರ್ಕಾರ ಬಸವಣ್ಣನವರನ್ನು “ಸಾಂಸ್ಕೃತಿಕ ನಾಯಕ” ಎಂದು ಅಧಿಕೃತವಾಗಿ ಘೋಷಿಸಲು ತೀರ್ಮಾನಿಸಿದೆ. ಬಸವಣ್ಣನವರ ನಾಯಕತ್ವದಲ್ಲಿ ನಾವು ಯಾವ ಸಂಸ್ಕೃತಿಯನ್ನು ಪೋಷಿಸಿ ಬೆಳೆಸಲಿದ್ದೇವೆ ? ಸಾಂಸ್ಕೃತಿಕ ನಾಯಕ ಎಂದರೆ ಅಲ್ಲಿ ನಿರ್ವಚನೆಯಾಗುವುದು ಯಾವ ಸಂಸ್ಕೃತಿ? ಈಗ ಪರಿಭಾವಿಸಲಾಗುತ್ತಿರುವ ಮತಾಧಾರಿತ ಅಥವಾ ಧರ್ಮಕೇಂದ್ರಿತ ಸಂಕುಚಿತ ಸಂಸ್ಕೃತಿಯೋ ಅಥವಾ ಸಮನ್ವಯದ ಬಹುತ್ವ ಭಾರತ ಬಯಸುವ ನೆಲಮೂಲದ ಸಂಸ್ಕೃತಿಯೋ ? ಈ ಪ್ರಶ್ನೆ ಬಹಳ ಮುಖ್ಯವಾಗುತ್ತದೆ. ಧಾರ್ಮಿಕ ಆಚರಣೆಗಳನ್ನೇ ಸಂಸ್ಕೃತಿ ಎಂದು ನಿರ್ವಚಿಸಲಾಗುತ್ತಿರುವ ಹೊತ್ತಿನಲ್ಲಿ, ತಳಮಟ್ಟದ ಸಮಾಜದಲ್ಲಿ ಪಾರಂಪರಿಕವಾಗಿ ಬೆಳೆದುಬಂದಿರುವ ಸಾಂಸ್ಕೃತಿಕ ಬೇರುಗಳು ತಮ್ಮ ಮೂಲ ಸತ್ವವನ್ನು ಕಳೆದುಕೊಳ್ಳುತ್ತಿವೆ. ವೈದಿಕೀಕರಣಕ್ಕೊಳಗಾಗುತ್ತಾ ಮೂಲ ಸೆಲೆಯನ್ನು ಕಳೆದುಕೊಳ್ಳುತ್ತಿವೆ. ಈ ಸಾಂಸ್ಕೃತಿಕ ನೆಲೆಗಳನ್ನು ಕಾಪಾಡುವ ಹೊಣೆ ನಮ್ಮ ಮೇಲಿದೆ.

ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದೇ ಘೋಷಿಸಲ್ಪಟ್ಟಿರುವ ಬಸವಣ್ಣನವರನ್ನು ಮೊದಲು ಮಠಮಾನ್ಯಗಳ, ದೇವಾಲಯಗಳ ಪರಿಧಿಯಿಂದ ತಾತ್ವಿಕವಾಗಿಯಾದರೂ ಹೊರತರಬೇಕಿದೆ. ಶ್ರೇಣೀಕೃತ ಜಾತಿ ವ್ಯವಸ್ಥೆಯ ಮೂಲ ಧಾತು, ಶ್ರೇಷ್ಠತೆ ಮತ್ತು ಪಾರಮ್ಯವನ್ನು, ವ್ಯವಸ್ಥಿತವಾಗಿ ಕಾಪಾಡಿಕೊಳ್ಳಲು ತವಕಿಸುವ ವರ್ತಮಾನದ ಸಮಾಜದಲ್ಲಿ ಬಸವಾನುಯಾಯಿಗಳು ಜಾತಿ ಗೋಡೆಗಳನ್ನು ಭೇದಿಸಿ ತಳಸಮಾಜದ ಕಾಯಕ ಜೀವಿಗಳಿಗೆ ಸಾಮಾಜಿಕ ಮೇಲ್‌ ಚಲನೆ ಹಾಗೂ ಮುಂಚಲನೆಯನ್ನು ಒದಗಿಸಲು ಮುಂದಾಗಬೇಕಿದೆ. ಆದರೆ ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಬಸವಾನುಯಾಯಿಗಳಲ್ಲಿ ಈ ಸೂಕ್ಷ್ಮತೆಯನ್ನು ಕಾಣಲಾಗುತ್ತಿಲ್ಲ. ಕಾಯಕ ಜೀವಿಗಳಿಗೆ ಸಾಂಸ್ಕೃತಿಕ ಸಮಾನತೆಯನ್ನು ನೀಡುವ ಮೂಲಕ ಜಾತಿ ಗೋಡೆಗಳನ್ನು ಭಂಜಿಸಲು ಬಯಸಿದ ಬಸವಣ್ಣ ಸಾಂಸ್ಕೃತಿಕವಾಗಿ ವರ್ತಮಾನ ಭಾರತದ ಕಾಯಕ ಜೀವಿಗಳಿಗೆ ಮಾರ್ಗದರ್ಶಕನಾಗಬೇಕಾದರೆ, ಬಸವಣ್ಣ ಸ್ಥಾವರ ಮುಕ್ತನಾಗಬೇಕು.

ಆದರೆ ದಿನದಿಂದ ದಿನಕ್ಕೆ ಬಸವಣ್ಣನ ವಚನಗಳು ಕೇವಲ ಘೋಷಣೆಗಳಾಗಿ ಅಂತ್ಯವಾಗುತ್ತಿವೆ. ಮಠಮಾನ್ಯಗಳು ಅಧಿಕಾರ ರಾಜಕಾರಣದ ಕೇಂದ್ರಗಳಾಗುತ್ತಿವೆ. ಮಠಾಧೀಶರು ರಾಜಕೀಯ ಅಧಿಕಾರ ಕೇಂದ್ರದಲ್ಲಿ ನಿರ್ಣಾಯಕರಾಗುತ್ತಿದ್ದಾರೆ. ಟಿಕೆಟ್‌ ಹಂಚಿಕೆಯಿಂದ ಸಚಿವ ಸಂಪುಟದವರೆಗೂ ರಾಜಕೀಯ ಸಮಾಲೋಚನೆಗಳು ಮಠಾಧಿಪತಿಗಳ ನಿಷ್ಕರ್ಷೆಗೊಳಗಾಗುತ್ತಿವೆ. ತಮ್ಮ ಜಾತಿ ಅಸ್ಮಿತೆಗಳ ಸಾಮಾಜಿಕ ಪ್ರಾಬಲ್ಯವನ್ನು ಕಾಪಾಡಿಕೊಳ್ಳಲು ಮಠಾಧೀಶರು ಮಾಡುವ ವಶೀಲಿಬಾಜಿ, ಶಿಫಾರಸುಗಳೇ ಆಡಳಿತ ವ್ಯವಸ್ಥೆಯನ್ನು ಬಹುಮಟ್ಟಿಗೆ ನಿರ್ದೇಶಿಸುತ್ತಿವೆ. ಜಾತಿ-ಉಪಜಾತಿಗೊಂದು ಮಠ ಇರುವ ಸಮಾಜದಲ್ಲಿ, ಸಂಸ್ಕೃತಿ ಮತ್ತು ಸಾಂಸ್ಕೃತಿಕ ನೆಲೆಗಳು ರಾಜಕೀಯ ಮೇಲಾಟಗಳಿಗೆ ಒಳಗಾಗಿರುವುದರಿಂದಲೇ, ಬಹುತ್ವ ಭಾರತವನ್ನು ನಿರ್ದೇಶಿಸಬೇಕಾದ ಜನಸಾಂಸ್ಕೃತಿಕ ಚೌಕಟ್ಟುಗಳೆಲ್ಲವೂ ಛಿದ್ರವಾಗುತ್ತಿವೆ.

ಜನಸಂಸ್ಕೃತಿಯ ಮೂಲಬೇರುಗಳು:

ಈ ಜನಸಾಂಸ್ಕೃತಿಕ ನೆಲೆಗಳಲ್ಲಿ ಪ್ರಧಾನವಾಗಿರುವ ಶ್ರಮಸಂಸ್ಕೃತಿಯ ಮೂಲ ಸೆಲೆಯನ್ನು ಕಾಪಾಡುವ ದೊಡ್ಡ ಜವಾಬ್ದಾರಿ ಸಮಾಜದ ಮೇಲಿದೆ. ಬಸವಣ್ಣನವರ ವಚನ :

“ ಇವನಾರವ, ಇವನಾರವ, ಇವನಾರವ ” ನೆಂದೆನಿಸದಿರಯ್ಯಾ.
“ಇವ ನಮ್ಮವ, ಇವ ನಮ್ಮವ, ಇವ ನಮ್ಮವ ” ನೆಂದೆನಿಸಯ್ಯಾ.
ಕೂಡಲಸಂಗಮದೇವಾ, ನಿಮ್ಮ ಮನೆಯ ಮಗನೆನಿಸಯ್ಯಾ ʼ

ಭಾರತದ ಸಂವಿಧಾನದ ಆಶಯಗೀತೆಯಂತೆ ಸರ್ವ ಸಮಾನತೆಯ ಭಾವವನ್ನು ಹೊರಸೂಸುತ್ತದೆ. ಆದರೆ ತಳಮಟ್ಟದ ಕಾಯಕ ಜೀವಿಗಳಲ್ಲೂ ಜಾತಿಭೇದ, ಮತಭೇದಗಳ ಬೀಜಗಳನ್ನು ಬಿತ್ತುವ ಮೂಲಕ ಸಮಾಜವನ್ನು ವಿಘಟನೆಯತ್ತ ಕರೆದೊಯ್ಯಲಾಗುತ್ತಿದೆ. ಈ ವಿಘಟನೆಗೆ ಕಾರಣವಾಗುತ್ತಿರುವ ಜಾತಿ ಶ್ರೇಷ್ಠತೆ, ಕೋಮುವಾದ, ಮತೀಯವಾದ ಮತ್ತು ಮತಾಂಧತೆಯ ವಿಷಬೀಜಗಳು ಅತ್ಯುನ್ನತ ಸ್ತರದಿಂದ ತಳಮಟ್ಟದವರೆಗೂ ದುಡಿಯುವ ವರ್ಗಗಳ ನಡುವೆ ಕಟ್ಟಿರುವ ಗೋಡೆಗಳು ಭಾರತದ ಬಹುತ್ವ ಸಂಸ್ಕೃತಿಯನ್ನೇ ಅಪಾಯಕ್ಕೆ ದೂಡಿರುವುದು ವರ್ತಮಾನದ ದುರಂತ ವಾಸ್ತವ.

ಅಸ್ಮಿತೆಯ ರಾಜಕಾರಣ ಭಾರತೀಯ ಸಮಾಜವನ್ನು ಎಷ್ಟು ಹಿಂದಕ್ಕೆ ಕರೆದೊಯ್ದಿದೆ ಎಂದರೆ ಪ್ರತಿಯೊಂದು ʼ ಭಿನ್ನ ʼವನ್ನೂ ʼ ಅನ್ಯ ʼ ಎಂದು ಭಾವಿಸಿ ದೂರ ಇರಿಸುವ ಒಂದು ಮನೋಭಾವ ಎಲ್ಲ ಸೈದ್ಧಾಂತಿಕ ನೆಲೆಗಳಲ್ಲೂ ವ್ಯಾಪಿಸಿದೆ. ಶ್ರಮ ಸಂಬಂಧಗಳ ಮೂಲಕವೇ ಒಂದಾಗಬೇಕಾದ ದುಡಿಯುವ ವರ್ಗಗಳಲ್ಲಿನ ಕಾಯಕ ಜೀವಿಗಳಲ್ಲೂ ವ್ಯಾಪಿಸಿರುವ ಅಸ್ಮಿತೆಯ ಸೋಂಕು, ತಳಮಟ್ಟದ ಕಾಯಕ ಸಮಾಜದಲ್ಲೂ“ಇವ ನಮ್ಮವನಲ್ಲ” ಎಂಬ ಭಾವನೆಯನ್ನು ಸಾರ್ವತ್ರೀಕರಿಸುತ್ತಿದೆ. ವ್ಯಕ್ತಿಯನ್ನು ಜನ್ಮಜಾತ ಜಾತಿ ಸೂಚಕದಿಂದ ಗುರುತಿಸುವ ವಿಕೃತ ಪರಂಪರೆಗೆ ಬಲಿಯಾಗಿರುವ ಬೃಹತ್‌ ಜನಸಮೂಹ ಅಸ್ಮಿತೆ ಆಧಾರಿತ ರಾಜಕಾರಣಕ್ಕೆ ಭೌತಿಕ ಬಂಡವಾಳವೂ, ಬೌದ್ಧಿಕ ಆಸ್ತಿಯೂ, ಸಾಂಸ್ಕೃತಿಕ ಪರಿಚಾರಕ ಶಕ್ತಿಯೂ ಆಗಿ ಪರಿಣಮಿಸುತ್ತಿದೆ. ನವ ಉದಾರವಾದಿ ಮಾರುಕಟ್ಟೆಯ ಆರ್ಥಿಕತೆ ಈ ನವ ಭೂಮಿಕೆಗಳನ್ನು ಪೋಷಿಸಲು ಸರ್ವ ಸಿದ್ಧತೆಗಳೊಡನೆ ಸಜ್ಜಾಗಿ ಕಾರ್ಯಪ್ರವೃತ್ತವಾಗಿದೆ.

ಮೂಲತಃ ಬಸವಣ್ಣನನ್ನು ಭಾರತದ ಸಾಂಪ್ರದಾಯಿಕ ಸಮಾಜದ ರಾಯಭಾರಿಯಾಗಿ ನಾವು ನೋಡಬೇಕಿದೆ. ವಚನಗಳಲ್ಲಿ ಬೋಧಿಸುವ ಮಾನವೀಯ ಸಾಂಸ್ಕೃತಿಕ ಮೌಲ್ಯಗಳನ್ನು ಯುವ ಸಮುದಾಯಗಳಲ್ಲಿ ಬಿತ್ತುವ ಕೆಲಸ ಆಗಬೇಕಿದೆ. ತನ್ಮೂಲಕ ಸುಶಿಕ್ಷಿತ ಸಮಾಜವನ್ನೂ ಆವರಿಸುತ್ತಿರುವ ಮತಾಂಧತೆಯ ಮೌಢ್ಯ ಮತ್ತು ಜಾತಿಪಾರಮ್ಯದ ಅಮಾನುಷತೆಯಿಂದ ಮುಕ್ತವಾಗುವುದು ನಮ್ಮ ಆದ್ಯತೆಯೂ ಆಗಬೇಕಿದೆ. ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದೇ ಸ್ವೀಕೃತವಾಗಬೇಕಾದರೆ ಇದು ಸರ್ಕಾರದ ಕಾರ್ಯಸೂಚಿಯಲ್ಲಿ ಪ್ರಧಾನ ಅಂಶವಾಗಬೇಕು. ಬಸವಣ್ಣ ಕೇವಲ ಘೋಷಿತ ಸಾಂಸ್ಕೃತಿಕ ನಾಯಕನಾಗಿ ಸ್ಥಾವರಗಳಲ್ಲಿ ಬಂದಿಯಾಗಿರದೆ ತಾವೇ ಉಪದೇಶಿಸಿದ ಜಂಗಮ ಸ್ವರೂಪದಲ್ಲಿ ಜನಮಾನಸದ ನಡುವೆ ಬಹುಸಂಸ್ಕೃತಿಯ ತಂತುಗಳನ್ನು ಬೆಸೆಯುವ ಶಕ್ತಿಯಾಗಿ ರೂಪುಗೊಳ್ಳುವುದಾದರೆ ಸರ್ಕಾರದ ಉದ್ದೇಶವೂ ಸಾರ್ಥಕವಾದೀತು.

ʼಅನ್ಯʼರ ಸೃಷ್ಟಿ ಹಾಗೂ ʼಅನ್ಯʼ ದ್ವೇಷದ ರಾಜಕೀಯ ಸಿದ್ಧಾಂತಗಳು, ಭಿನ್ನಭೇದಗಳನ್ನು ಹೆಚ್ಚಿಸುವ ಬಂಡವಾಳಶಾಹಿ ಮಾರುಕಟ್ಟೆ ಆರ್ಥಿಕ ನೀತಿಗಳು, ಶ್ರೇಣೀಕೃತ ಜಾತಿ ಸಮಾಜದ ಮೂಲ ಸ್ಥಾಯಿಯನ್ನು ಕಾಪಾಡಲು ಮುಂಚೂಣಿಯಲ್ಲಿರುವ ಸಾಂಸ್ಕೃತಿಕ ಭೂಮಿಕೆಗಳು, ಪಿತೃಪ್ರಧಾನತೆಯನ್ನು ಪೋಷಿಸುತ್ತಿರುವ ಸಾಂಪ್ರದಾಯಿಕ ಸಮಾಜದ ಚಿಂತನೆಗಳು ಇವೆಲ್ಲವೂ ಇಂದು ಸಂವಿಧಾನದ ಮೂಲ ಆಶಯಗಳನ್ನೂ ಮಣ್ಣುಗೂಡಿಸುತ್ತಿವೆ. ಈ ಭಂಜಕ ಕ್ರಿಯೆಗಳ ನಡುವೆಯೇ ಅಂಬೇಡ್ಕರ್‌-ಬುದ್ಧ-ಬಸವಣ್ಣ ಮುಂತಾದ ದಾರ್ಶನಿಕರನ್ನು ನಾವು ಸಾಂಸ್ಕೃತಿಕ ನಾಯಕರಾಗಿ ಸ್ಥಾಪಿಸುತ್ತಿದ್ದೇವೆ. ಇವರೆಲ್ಲರೂ ಮೂಲತಃ ಸ್ಥಾವರ ಭಂಜಕರು, ಜಂಗಮ ತತ್ವದ ಪರಿಚಾರಕರು ಎನ್ನುವುದನ್ನು ಗಮನದಲ್ಲಿಡಬೇಕಿದೆ. ಈ ಎಚ್ಚರಿಕೆಯಿಂದ ರಾಜ್ಯ ಕಾಂಗ್ರೆಸ್‌ ಸರ್ಕಾರ ಬಸವ ತತ್ವಗಳನ್ನು, ವಚನಗಳನ್ನು ಬೌದ್ಧಿಕ ಪ್ರಚಾರಕ್ಕೆ ಸೀಮಿತಗೊಳಿಸದೆ ತಳಮಟ್ಟದ ಸಮಾಜದವರೆಗೆ ತಲುಪಿಸುವ ಮೂಲಕ, ಬಸವಣ್ಣನವರು ಎಣಿಸಿದಂತೆ ಸಮಸ್ತ ಜನಕೋಟಿಯಲ್ಲೂ “ ಇವ ನಮ್ಮವ ಇವ ನಮ್ಮವ ” ಎಂಬ ಭಾವನೆಯನ್ನು ಉದ್ಧೀಪನಗೊಳಿಸಬೇಕಿದೆ.

ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಸ್ವೀಕರಿಸುವುದೇ ಆದರೆ ಆ ನಾಯಕ ಪೀಠ ಸ್ಥಾವರವಾಗಿರಕೂಡದು. ಅಲ್ಲಿ ಬಸವಣ್ಣ ಎಂಬ ಜಂಗಮ ಕಾಯಕ ಯೋಗಿಯ ವಚನಗಳು, ತತ್ವಗಳು ಸ್ಥಾಪನೆಯಾಗಬೇಕು. ಆಗ ಸರ್ಕಾರದ ಸದುದ್ದೇಶವೂ ಸಾರ್ಥಕವಾದೀತು. ಈ ಮುನ್ನೆಚ್ಚರಿಕೆ ನಮ್ಮೊಳಗಿದೆಯೇ ?

ಇತ್ತೀಚಿನ ಸುದ್ದಿ