ದಲಿತ ನಾಯಕ ಎಂ.ಜಯಣ್ಣ ಅವರ ಸ್ಮಾರಕ ನಿರ್ಮಾಣಕ್ಕೆ ಸಿದ್ಧತೆ - Mahanayaka

ದಲಿತ ನಾಯಕ ಎಂ.ಜಯಣ್ಣ ಅವರ ಸ್ಮಾರಕ ನಿರ್ಮಾಣಕ್ಕೆ ಸಿದ್ಧತೆ

18/12/2020

ಚಿತ್ರದುರ್ಗ: ದಲಿತ ಚಳವಳಿಯ ನೇತಾರ ಪ್ರೊ.ಬಿ.ಕೃಷ್ಣಪ್ಪ ಒಡನಾಡಿಯಾಗಿದ್ದ ಎಂ.ಜಯಣ್ಣ ಅವರು ಇತ್ತೀಚೆಗಷ್ಟೆ ನಿಧನರಾಗಿದ್ದರು. ಅವರ ನಿಧನಕ್ಕೆ  ರಾಜ್ಯ ವ್ಯಾಪಿ ಭಾರೀ ಸಂತಾಪ  ವ್ಯಕ್ತವಾಗಿತ್ತು. ಜಯಣ್ಣ ಅವರು ದಲಿತ ಸಂಘರ್ಷ ಸಮಿತಿ ಅಸ್ತಿತ್ವಕ್ಕೆ ಬರಲು ಪ್ರಮುಖ ಪಾತ್ರವಹಿಸಿದ್ದು, ಪ್ರಭಾವಿ ದಲಿತ ನಾಯಕರಾಗಿದ್ದರು.

ಜಯಣ್ಣನವರಿಗೆ ಇದೀಗ ಸರ್ಕಾರದ ಯಾವುದೇ ಸಹಕಾರವಿಲ್ಲದೇ ಅವರ ಅಭಿಮಾನಿಗಳು, ಒಡನಾಡಿಗಳು ಅಭಿಮಾನಿಗಳು ಸ್ವಂತ ಖರ್ಚಿನಲ್ಲಿ ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿದ್ದು, ಚಿತ್ರದುರ್ಗ ತಾಲ್ಲೂಕಿನ ಕ್ಯಾದಿಗೆರೆ ಸಮೀಪದ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಎಕರೆ ಭೂಮಿಯನ್ನು ಸ್ಮಾರಕಕ್ಕೆ ಮೀಸಲಿಡಲಾಗಿದೆ.

ಸಂಸದ ಎ.ನಾರಾಯಣಸ್ವಾಮಿ ಹಾಗೂ ಮಾಜಿ ಸಚಿವ ಎಚ್‌.ಆಂಜನೇಯ ತಲಾ ಒಂದು ಎಕರೆ ಭೂಮಿಯನ್ನು ಖರೀದಿಸಿ ಕೊಟ್ಟಿದ್ದಾರೆ. ಎಂ.ಜಯಣ್ಣ ಮೆಮೋರಿಯಲ್‌ ಚಾರಿಟಬಲ್‌ ಟ್ರಸ್ಟ್‌ ಕೂಡ ಅಸ್ತಿತ್ವಕ್ಕೆ ಬಂದಿದ್ದು, ಜಯಣ್ಣ ಅವರ ಪುತ್ರ ಜೆ.ಪ್ರಸನ್ನಕುಮಾರ್‌ ಕಾರ್ಯದರ್ಶಿಯಾಗಿದ್ದಾರೆ. ಟ್ರಸ್ಟ್‌ ಹಾಗೂ ಸ್ಮಾರಕದ ರೂಪುರೇಷೆಗಳು ಇನ್ನೂ ಅಂತಿಮ ಹಂತಕ್ಕೆ ಬರಬೇಕಿದೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ