ಪತ್ನಿಯ ಹೈಡ್ರಾಮಾಕ್ಕೆ ಪ್ರಾಣವನ್ನೇ ಕಳೆದುಕೊಂಡ ಪತಿ - Mahanayaka

ಪತ್ನಿಯ ಹೈಡ್ರಾಮಾಕ್ಕೆ ಪ್ರಾಣವನ್ನೇ ಕಳೆದುಕೊಂಡ ಪತಿ

15/12/2020

ವಿಜಯವಾಡ: ಪತಿಗೆ ಪಾಠ ಕಲಿಸಬೇಕು ಎಂದು ಪತ್ನಿ ಆಡಿರುವ ನಾಟಕಕ್ಕೆ ಪತಿಯ ಪ್ರಾಣವೇ ಹೊರಟು ಹೋಗಿದೆ. ಈ ಘಟನೆ ನಡೆದಿರುವುದು ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ. 28 ವರ್ಷದ ವೆಂಕಟ ರವಿಕುಮಾರ್ ಪತ್ನಿಯ ಹೈಡ್ರಾಮಾಕ್ಕೆ ಬಲಿಯಾಗಿದ್ದಾರೆ.

ಮೂರು ವರ್ಷಗಳ ಹಿಂದೆ ವೆಂಕಟ ರವಿಕುಮಾರ್ ಹಾಗೂ ಪುಷ್ಪಶಿವ ಇವರ ವಿವಾಹ ನಡೆದಿತ್ತು. ಇವರು ಮಂಡಿಕುಡುರು ಮಂಡಲದ ಪೆದ್ದಪಟ್ನಂ ಗ್ರಾಮದಲ್ಲಿ ವಾಸಿಸುತ್ತಿದ್ದರು. ದಂಪತಿ ಕಳೆದ ಭಾನುವಾರದಂದು ಒಟ್ಟಿಗೆ ಕುಳಿತುಕೊಂಡು ಟಿವಿ ವೀಕ್ಷಿಸುತ್ತಿದ್ದು, ಈ ವೇಳೆ ಅವರ ನಡುವೆ ಸಣ್ಣ ಜಗಳವಾಗಿದೆ. ಹಾಗೆ ಹೋಗಿ ಇಬ್ಬರು ಮಲಗಿದ್ದು ಬೆಳಗ್ಗಿನ ವೇಳೆ ರವಿಕುಮಾರ್ ಎದ್ದು ನೋಡುವಾಗ ಪತ್ನಿ ಪುಷ್ಪಳ ಪತ್ತೆಯೇ ಇರಲಿಲ್ಲ.

ಪತ್ನಿ ಕಾಣದೇ ಇದ್ದುದನ್ನು ನೋಡಿ ಆತಂಕಗೊಂಡ ರವಿಕುಮಾರ್ ಎಲ್ಲೆಡೆ ಪತ್ನಿಯನ್ನು ಹುಡುಕಾಡಿದ್ದಾರೆ.  ಈ ವೇಳೆ, ಗೋದಾವರಿ ನದಿಯ ಬದಿಯಲ್ಲಿ ಪತ್ನಿಯ ಚಪ್ಪಲಿ ಪತ್ತೆಯಾಗಿದೆ. ಇದನ್ನು ತಾಯಿಗೆ ತಂದು ತೋರಿಸಿದ್ದು, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಭಯಭೀತರಾಗಿದ್ದರು. ತಕ್ಷಣವೇ ಅಲ್ಲಿಂದ ಹೊರಟು ಹೋದ ಅವರು ಸುಮಾರು ನಾಲ್ಕು  ಕಿ.ಮೀ. ಮುಂದೆ ಚಲಿಸಿ ಪಸ್ಸರ್ಲಪುಡಿಯ ಸೇತುವೆ ಬಳಿ ಬೈಕ್ ನಿಲ್ಲಿಸಿ ನೀರಿಗೆ ಹಾರಿದ್ದಾರೆ.

ಪತ್ನಿಯನ್ನು ಕಾಪಾಡುವ ಉದ್ದೇಶದಿಂದ ಅವರು ನೀರಿಗೆ ಹಾರಿದ್ದಾರೆ ಎಂದು ಹೇಳಲಾಗಿದೆ. ಅವರು ನೀರಿಗೆ ಹಾರುವುದನ್ನು ಸ್ಥಳೀಯ ಮೀನುಗಾರರು ನೋಡಿದ್ದು, ಅವರು ರಕ್ಷಣೆಗೆ ಯತ್ನಿಸಿದರೂ ರವಿಕುಮಾರ್ ಸುಳಿವು ಎಲ್ಲಿಯೂ ಲಭ್ಯವಾಗಿಲ್ಲ.

ರವಿಕುಮಾರ್ ಪತ್ನಿ ಪತಿಗೆ ಬುದ್ಧಿ ಕಲಿಸಬೇಕು ಎಂದು ಯಾರಿಗೂ ಮಾಹಿತಿ ನೀಡದೇ ಪಲಕೋಲ್ ​ನಲ್ಲಿರುವ ಆಕೆಯ ಸಂಬಂಧಿಕರ ಮನೆಗೆ ತೆರಳಿದ್ದಳು. ನದಿಯ ಬದಿಯಲ್ಲಿ ಚಪ್ಪಲಿ ಇಟ್ಟು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂಬಂತೆ ಸೀನ್ ಕ್ರಿಯೇಟ್ ಮಾಡಿದ್ದಕ್ಕೆ ಇದೀಗ ಪತಿಯ ಪ್ರಾಣವೇ ಹೋಗಿದೆ.

ಇತ್ತೀಚಿನ ಸುದ್ದಿ